ಸಿಎಂ ನಾಳೆ ಉತ್ತರಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುವರೇ?

Spread the love

ಬೆಳಗಾವಿ : ನಾಳೆ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲು ಯಡಿಯೂರಪ್ಪ ನಾಳೆ ಭೇಟಿ ನೀಡಲಿದ್ದಾರೆ.

ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ 2 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಅವರು ಉತ್ತರ ಕನ್ನಡ ಜಿಲ್ಲೆಗೆ ತೆರಳುವರು. ಕಾರನಾರ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದರು.

ಇಂದು ಸಂಜೆಯ ಹೊತ್ತಿಗೆ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಹೈಕಮಾಂಡ್ ಸಂದೇಶ ಬರಲಿದೆ ಎಂದು ಕಾಯುತ್ತಿರುವ ಯಡಿಯೂರಪ್ಪ ನಾಳೆಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಘೋಷಿಸುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ನಾನು ಸಂತೃಪ್ತನಾಗಿದ್ದೇನೆ. ರಾಜ್ಯದಲ್ಲಿ ಯಾರಿಗೂ ಸಿಗದ ಅವಕಾಶ, ಸ್ಥಾನ ಮಾನ ನನಗೆ ಸಿಕ್ಕಿದೆ. ನಾವೆಲ್ಲರೂ ಹೈಕಮಾಂಡ್ ಮಾತನ್ನು ಕೇಳಬೇಕಾಗುತ್ತದೆ. 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಯಡಿಯೂರಪ್ಪ ತಿಳಿಸಿದರು.

ಸ್ಥಾನ ಕಳೆದುಕೊಳ್ಳುವ ಆತಂಕ :  ಉತ್ತರ ಕನ್ನಡಕ್ಕೆ ಈ ಹಿಂದೆ ಭೇಟಿ ನೀಡಿದ್ದ ಬಹುತೇಕ ಮುಖ್ಯಮಂತ್ರಿಗಳು ಅಲ್ಪಾವಧಿಯ ಅಧಿಕಾರ ನಡೆಸಿ ಸ್ಥಾನ ಕಳೆದುಕೊಂಡಿರುವ ಇತಿಹಾಸವಿದೆ. ಜಗದೀಶ್ ಶೆಟ್ಟರ್, ಎಚ್. ಡಿ‌. ಕುಮಾರಸ್ವಾಮಿ, ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿ ತೆರಳಿದ ಕೆಲವೇ ದಿನ ಇಲ್ಲವೇ ತಿಂಗಳುಗಳಲ್ಲಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರು.

ಒಂದಿಲ್ಲೊಂದು ವಿವಾದದಲ್ಲಿ ಸ್ಥಾನ ಕಳೆದುಕೊಂಡವರೇ ಹೆಚ್ಚು. ಯಡಿಯೂರಪ್ಪ ಕೂಡ ದಶಕಗಳ ಹಿಂದೆ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲೇ ಜಿಲ್ಲೆಗೆ ಭೇಟಿ ನೀಡಿ, ಕೆಲ ಸಮಯದಲ್ಲೇ ಅಧಿಕಾರ‌ಕಳೆದುಕೊಂಡಿದ್ದರು.

ಈಗಾಗಲೇ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ವಿಚಾರ ಸುದ್ದಿಯಲ್ಲಿದ್ದು, ಯಡಿಯೂರಪ್ಪ ಕೂಡ ಕಾರವಾರ ಭೇಟಿ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ತೆರಳಿದ ಬಳಿಕವೇ ರಾಜೀನಾಮೆ ನೀಡಲಿದ್ದಾರೆ ಅಥವಾ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕರದ್ದು.

ಆದರೆ ಈವರೆಗೂ ಸಿ.ಎಂ. ಉತ್ತರ ಕನ್ನಡ ಪ್ರವಾಸ ದೃಢಪಟ್ಟಿಲ್ಲ. ದೃಢಪಟ್ಟು, ಭೇಟಿ ನೀಡಿದ ಬಳಿಕ ಮುಂದೇನಾಗಲಿದೆ? ಎಂಬುದನ್ನು ಕಾದು ನೋಡಬೇಕಾಗಿದೆ.