ಸಚಿವ ಸಂಪುಟ ರಚನೆ ಸುಗಮವಾಗಿ ಸಾಗುತ್ತದೆ : ಸಿಎಂ ಬೊಮ್ಮಾಯಿ ವಿಶ್ವಾಸ

Spread the love

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದಾಗ ಅವರು ನೀಡುವ ಸಲಹೆ, ಸೂಚನೆ ಪ್ರಕಾರ ಮುಂದಿನ ನಿರ್ಣಯ ಕೈಗೊಳ್ಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೆಹಲಿಗೆ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ಹೇಳಲು ಆಗಮಿಸಿರುವ ಬಸವರಾಜ ಬೊಮ್ಮಾಯಿ ಕರ್ನಾಟಕ ಭವನ ಮುಂದೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಸಂಜೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡುತ್ತೇನೆ. ಅದಕ್ಕೆ ಮುನ್ನ ರಾಜನಾಥ್ ಸಿಂಗ್ ಹಾಗೂ ನಂತರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ.

ಮಧ್ಯಾಹ್ನ 1 ಗಂಟೆಗೆ ರಾಜ್ಯದ ಸಂಸದರನ್ನು ಸಭೆ ಮತ್ತು ಭೋಜನಕ್ಕೆ ಆಹ್ವಾನಿಸಿದ್ದೇನೆ. ಇವತ್ತು ಇಲ್ಲಿಯೇ ಉಳಿದುಕೊಂಡು ನಾಳೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ ಎಂದರು.

ಸಚಿವ ಸಂಪುಟ ರಚನೆ ಸುಗಮ: ರಾಜ್ಯ ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯುತ್ತದೆ. ಯಾವುದೇ ಅಡ್ಡಿ-ಆತಂಕಗಳು ಬರದೆ ಉತ್ತಮವಾಗಿ ಪ್ರಕ್ರಿಯೆ ಸಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿ ಹಲವು ಆಕಾಂಕ್ಷಿಗಳು ಇರುತ್ತಾರೆ, ಪ್ರಾದೇಶಿಕ, ಸಮುದಾಯ ಪ್ರಾತಿನಿಧ್ಯ ನೋಡಿಕೊಂಡು ಸಚಿವ ಸಂಪುಟ ರಚನೆ ಮಾಡಬೇಕಾಗುತ್ತದೆ ಎಂದರು.