ಗೃಹ ಸಚಿವರ ‘ರೇಪ್’ ಹೇಳಿಕೆ; ಆರಗ ಜ್ಞಾನೇಂದ್ರ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ

Spread the love

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಬೇಜವಾಬ್ದಾರಿ ಹೇಳಿಕೆಗೆ ಕಿಡಿ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನ ಯಾರ್ಯಾರಿಂದ ರೇಪ್ ಆಗಿದೆ ಅವರನ್ನು ಬಂಧಿಸಲಿ ಎಂದು ಹೇಳಿದ್ದಾರೆ.

ರೇಪ್ ನಡೆದಿದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಡಿ.ಕೆ.ಶಿವಕುಮಾರ್, ಗೃಹ ಸಚಿವರಾಗಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ‘ರೇಪ್’ ಎಂಬ ಪದವನ್ನು ಗೃಹ ಸಚಿವರು ಬಹಳ ಗೌರವಯುತ ಎಂಬ ರೀತಿಯಲ್ಲಿ ಬಳಸುತ್ತಿದ್ದಾರೆ. ಸಚಿವರ ಈ ಪದ ತುಂಬಾ ಪ್ರಿಯವಾದ ಪದ. ಅದಕ್ಕೆ ಆ ಪದವನ್ನು ಸರಳ ಎಂಬಂತೆ ಬಳಸುತ್ತಿದ್ದಾರೆ. ಕಾಂಗ್ರೆಸ್ ನವರು ರೇಪ್ ಮಾಡುತ್ತಿದ್ದಾರೆ ಎಂದ ಮೇಲೆ ಯಾರು ರೇಪ್ ಮಾಡಿದ್ದಾರೆ ಅವರನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಉಗ್ರಪ್ಪ ಮಾಡಿದ್ದಾರಾ? ಸಿದ್ದರಾಮಯ್ಯ ಮಾಡಿದ್ದಾರಾ? ಹೆಚ್.ಎಂ.ರೇವಣ್ಣ ಮಾಡಿದ್ದಾರಾ? ಡಿ.ಕೆ.ಶಿವಕುಮಾರ್ ಮಾಡಿದ್ದಾರಾ? ಯಾರೇ ಮಾಡಿದ್ದರೂ ಅವರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಿ ಎಂದು ಗುಡುಗಿದ್ದಾರೆ.

ಇನ್ನು ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗುತ್ತದೆ. ಹೆಚ್.ಎಂ.ರೇವಣ್ಣ, ತನ್ವೀರ್ ಸೇಠ್ ಕೂಡ ಇದರಲ್ಲಿ ಇರಲಿದ್ದಾರೆ ಎಂದು ಹೇಳಿದರು.