ಮುಂಡಗೋಡ: ವಿವಾಹಿತ ಮಹಿಳೆಯೊಬ್ಬಳು ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಜರುಗಿದೆ.
ಸ್ವಾತಿ ಮಂಜುನಾಥ ಹೊಸೂರ (26) ಎಂಬವಳೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಯಾಗಿದ್ದಾಳೆ. ಸ್ವಾತಿ ಮದುವೆಯಲ್ಲಿ ವರದಕ್ಷಿಣೆಯನ್ನು ನೀಡಿಲ್ಲ ಹಾಗೂ ಗಂಡು ಮಕ್ಕಳು ಸಹ ಜನಿಸಿಲ್ಲ ಎಂದು ಸ್ವಾತಿಯ ಗಂಡ ಮಂಜುನಾಥ ಹೊಸೂರ ಹಾಗೂ ತಾಯವ್ವ ಕಲ್ಲಪ್ಪ ಹೊಸೂರ ಎಂಬವರು ಸೇರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಇದರಿಂದ ಮನನೊಂದ ನನ್ನ ಮಗಳು ಬುಧವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಕಾರಣವಾದ ಗಂಡ ಹಾಗೂ ಅತ್ತೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸ್ವಾತಿಯ ತಾಯಿ ಮಲ್ಲವ್ವ ಕಬ್ಬೇರ ಎಂಬವರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.