ಸಿಎಂ ಬೊಮ್ಮಾಯಿ ಭೇಟಿಯಾಗಲು ಬಂದು ನಿರಾಸೆಯಿಂದ ತೆರಳಿದ ಆರ್.ಶಂಕರ್

Spread the love

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಬಂದ ಮಾಜಿ ಸಚಿವ ಆರ್.ಶಂಕರ್ ನಿರಾಸೆಯಿಂದ ಹಿಂದೆ ತೆರಳಬೇಕಾಯಿತು. ಸಿಎಂ ಬೊಮ್ಮಾಯಿ ಅವರ ಆರ್. ಟಿ ನಗರ ನಿವಾಸಕ್ಕೆ ಆರ್. ಶಂಕರ್ ಆಗಮಿಸಿದ್ದರು. ಆದರೆ ಆ ವೇಳೆ ಸಿಎಂ ಅಲ್ಲಿರಲಿಲ್ಲ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಶಂಕರ್, ರಾಜಕಾರಣಿ ಆಗಿ ಸಿಎಂ ಭೇಟಿ ಮಾಡುವ ಅವಶ್ಯಕತೆ ಇರುತ್ತದೆ. ನಾನು ಈಗಾಗಲೇ ಸಿಎಂ ಭೇಟಿ ಮಾಡಿದ್ದೇನೆ. ಸಂಪುಟ ರಚನೆ ಇರುವುದರಿಂದ ಏನಾದರೂ ಕೇಳೋದು ಮಾಡೋದು ಇರುತ್ತದೆ ಎಂದರು.

ಸಚಿವ ಸ್ಥಾನದ ಬಗ್ಗೆ ನಮಗೆ ನೂರಕ್ಕೆ ನೂರು ವಿಶ್ವಾಸ ಇದೆ. ಹೀಗಾಗಿ ಪದೇ ಪದೇ ಹೇಳುವ ಅಗತ್ಯವಿಲ್ಲ. ಕಾದು ನೋಡೋಣ ಎಲ್ಲಾ ಒಳ್ಳೆಯದಾಗುತ್ತದೆ ಎಂದರು.

ಬಿಎಸ್ ವೈ ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ನಾವು ರಾಜಕಾರಣಿಯಾಗಿ ಭೇಟಿ ಮಾಡುವುದು ಸಹಜ. ರಾಜ್ಯದ ಜನರಿಗೆ ಎಲ್ಲಾ ಗೊತ್ತಿದೆ ನೋಡೋಣ ಎಂದರು.

ಆಕಸ್ಮಾತ್ ಸಚಿವ ಸ್ಥಾನ ಸಿಗದಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಂಕರ್, ಆಗದೇ ಇದ್ದರೆ, ಸಿಗದೇ ಇದ್ದರೆ ಇದಕ್ಕೆಲ್ಲ ಉತ್ತರ ಇಲ್ಲ ಎಂದು ಹೇಳುವ ಮೂಲಕ ನೇರವಾಗಿ ನಾನೂ ಸಚಿವ ಸ್ಥಾನಾಕಾಂಕ್ಷಿ ಎಂದರು.