ಬಡ ಅತಿಕ್ರಮಣದಾರರ ಮೇಲೆ ಮರುಕಳಿಸಿದ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ : ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ರವೀಂದ್ರ ನಾಯ್ಕ ಆಗ್ರಹ

Spread the love

ಮುಂಡಗೋಡ : ಅನಾದಿಕಾಲದಿಂದ ಅರಣ್ಯಭೂಮಿಯನ್ನು ಸಾಗುವಳಿ ಮಾಡುತ್ತಿರುವ ಕಾತೂರ ವಲಯ ವ್ಯಾಪ್ತಿಯ ನಾಗನೂರ ಗ್ರಾಮದ ಅರಣ್ಯವಾಸಿಯ ಸಾಗುವಳಿಗೆ ಆತಂಕಪಡಿಸಿ, ದೌರ್ಜನ್ಯ ನಡೆಸಿದ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಡಗೋಡ ತಾಲೂಕಿನ ಕಾತೂರ ಗ್ರಾಪಂ ವ್ಯಾಪ್ತಿಯ ನಾಗನೂರ ಎಂಬಲ್ಲಿ ಅತಿಕ್ರಮಣದಾರ ಗರೀಬ ದಿವಾನ ಶಾಬುಸಾಬ ಹಿರೇಹಳ್ಳಿ ಎಂಬುವವರ ಅರಣ್ಯ ಅತಿಕ್ರಮಣ ಸಾಗುವಳಿ ಕ್ಷೇತ್ರಕ್ಕೆ ಅಧ್ಯಕ್ಷ ರವೀಂದ್ರ ನಾಯ್ಕ ಭೇಟಿ ಕೊಟ್ಟ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.
೧೯೭೬ನೇ ಸಾಲಿನಿಂದ ದೌರ್ಜನ್ಯಕ್ಕೆ ಒಳಗಾದ ಅರಣ್ಯವಾಸಿಯ ಕುಟುಂಬವು ನಾಗನೂರ ಗ್ರಾಮ ಅರಣ್ಯ ಸನಂ ೧೯ ರಲ್ಲಿ ೪ ಎಕ್ರೆ ಕ್ಷೇತ್ರದ ಭೂಮಿಯಲ್ಲಿ ಅಲ್ಪಾವಧಿ ಕೃಷಿ ಚಟುವಟಿಕೆಯನ್ನು ಜೀವನೋಪಾಯಕ್ಕಾಗಿ ಮಾಡುತ್ತ ಬಂದಿದ್ದು ಇರುತ್ತದೆ. ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ ,ಅರ್ಜಿಯು ಅರಣ್ಯ ಹಕ್ಕು ಸಮಿತಿಯಲ್ಲಿ ಪರಿಶೀಲನೆ ಹಂತದಲ್ಲಿದೆಯೆಂದು ಸ್ಥಳದಲ್ಲಿ ಅರಣ್ಯವಾಸಿ ಕುಟುಂಬವು ದಾಖಲೆಗಳನ್ನು, ಕೃಷಿ ಮಾಡಿದ ಪೊಟೋಗಳನ್ನು ಪ್ರದರ್ಶಿಸಿ ನೋವು ಹಂಚಿಕೊಂಡರು.
ಕಾನೂನು ಉಲ್ಲಂಘನೆ :
ಕಾನೂನು ವ್ಯಾಪ್ತಿಗೆ ಮೀರಿ,ಕಾನೂನು ವಿಧಿವಿಧಾನ ಅನುಸರಿಸದೇ ಬಡ ಅರಣ್ಯವಾಸಿ ಕುಟುಂಬಗಳ ಮೇಲೆ ದೌರ್ಜನ್ಯಮಾಡುವ ಅರಣ್ಯ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು‌ ಎಂದು ಅವರು ಹಿರಿಯ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.