ಸೋಮಶೇಖ‌ರ್, ಶಿವರಾಮ್ ಹೆಬ್ಬಾರ್ ಉಚ್ಚಾಟನೆಗೆ ವರದಿ : BJP ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ

Spread the love

ಹುಬ್ಬಳ್ಳಿ: ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ವರದಿ ನೀಡಿದ್ದೇನೆ. ರಾಷ್ಟ್ರ ಮತ್ತು ರಾಜ್ಯ ನಾಯಕರು ಈ ತಿಂಗಳ ಅಂತ್ಯದೊಳಗೆ ಎಲ್ಲ ಗೊಂದಲಕ್ಕೂ ಅಂತ್ಯ ಹಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದ ಮುಖಂಡರ ಕುರಿತು ವರದಿ ನೀಡುವಂತೆ ಪಕ್ಷದ ಕೇಂದ್ರ ಸಮಿತಿ ಸೂಚಿಸಿತ್ತು. ಮಂಡಳ ಅಧ್ಯಕ್ಷರ ಮತ್ತು ಜಿಲ್ಲಾ ಘಟಕದ ಅಧ್ಯಕರ ವರದಿಯಾಧರಿಸಿ, ಇಬ್ಬರು ಶಾಸಕರನ್ನು ಪಕ್ಷದಿಂದ ಹೊರಗೆ ಹಾಕುವಂತೆ ಒಂದು ವರ್ಷದ ಹಿಂದೆಯೇ ವರದಿ ನೀಡಿದ್ದೇನೆ. ಆದರೆ, ಯಾವುದೇ ಸಂಸದರ, ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ನನಗೆ ಅಧಿಕಾರವಿಲ್ಲ. ವರದಿ ನೀಡುವುದಷ್ಟೇ ನನ್ನ ಕಾರ್ಯವ್ಯಾಪ್ತಿ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಶಿಸ್ತು ಸಮಿತಿ ಅಧ್ಯಕ್ಷನಾದ ನಂತರ ಸಾಕಷ್ಟು ಪ್ರಕರಣಗಳು ಬಂದಿದ್ದವು. ಬಹುತೇಕ ಪ್ರಕರಣಗಳನ್ನು ಪಕ್ಷದ ವರಿಷ್ಠರ ಎದುರು ಕೂತು ಚರ್ಚಿಸಿ ಪರಿಹಾರಕಂಡುಕೊಳ್ಳಲಾಗಿದೆ. ಕೆಲವಷ್ಟು ಪ್ರಕರಣದ ಕುರಿತು ವರದಿ ನೀಡಿದ್ದೇನೆ. ಪಕ್ಷದ ತತ್ವ ಸಿದ್ಧಾಂತ ಮತ್ತು ನಿಯಮಗಳ ಅಡಿಯಲ್ಲಿ ಶಿಸ್ತುಕ್ರಮದ ವರದಿ ಸಿದ್ಧಪಡಿಸಲಾಗುತ್ತದೆ ಎಂದು ಅವರು ಹೇಳಿದರು.