ಬೆಳಗಾವಿ: 1 ರಿಂದ 8ನೇ ತರಗತಿಯವರೆಗೆ ಶಾಲೆಗಳು ಆರಂಭಿಸುವ ಕುರಿತು ಆಗಸ್ಟ್ 30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಶಾಲೆ ಆರಂಭಕ್ಕೆ ಪೋಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಸಮಿತಿಯಲ್ಲಿರುವ ಡಾ. ದೇವಿ ಪ್ರಸಾದ್ ಶೆಟ್ಟಿಯವರು 6 ರಿಂದ 8ನೇ ತರಗತಿ ಆರಂಭ ಮಾಡಬಹುದು ಎಂದು ಹೇಳಿದ್ದಾರೆ. ಆಗಸ್ಟ್ 30ರಂದು ಸಭೆ ಸೇರಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ 57 ಶಿಕ್ಷಕರು ಬಿಟ್ಟು ಎಲ್ಲರೂ ಕೊರೊನಾ ಲಸಿಕೆ ಪಡೆದಿದ್ದಾರೆ. ಶಿಕ್ಷಕರ ಕೊರತೆ ಎಲ್ಲಾ ಕಡೆ ಇದೆ. ಬೆಳಗ್ಗೆ, ಮಧ್ಯಾಹ್ನ ಒಂದೊಂದು ಬ್ಯಾಚ್ ಮಾಡುವ ಸಲಹೆಯೂ ಬಂದಿದೆ. ಮಕ್ಕಳು ಉತ್ಸಾಹದಲ್ಲಿ ಶಾಲೆಗಳಿಗೆ ಬರುತ್ತಿದ್ದಾರೆ. ಪೂರ್ಣ ಕ್ಲಾಸ್ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಶೇಕಡ 56ರಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯಾಗಿದೆ. ಲಾಕ್ಡೌನ್ನಿಂದ್ ಪ್ರಿಂಟಿಂಗ್ ಪ್ರೆಸ್ ಬಂದ್ ಆಗಿದ್ದರಿಂದ ಎಲ್ಲ ಪುಸ್ತಕಗಳೂ ಪ್ರಕಟವಾಗಿಲ್ಲ. ಈ ತಿಂಗಳ ಕೊನೆಯವರೆಗೆ ಶೇಕಡ 80ರಷ್ಟು ಪುಸ್ತಕ ವಿತರಣೆ ಮಾಡುತ್ತೇವೆ. ಬುಕ್ ಬ್ಯಾಂಕ್ ಮಾಡಿ ಪುಸ್ತಕ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.