ಸರ್ಕಾರಿ ದೇವಸ್ಥಾನಗಳಿಗೆ ದೇವರೇ ಮಾಲಿಕರು!

Spread the love

ನವದೆಹಲಿ: ಸರ್ಕಾರಿ ದೇವಸ್ಥಾನದ ಒಡೆತನಕ್ಕೆ ಸಂಬಂಧಿಸಿದಂತೆ; ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ, ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ದೇವಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಆಸ್ತಿಗಳ ಮಾಲಿಕನ ಸ್ಥಾನದಲ್ಲಿ ಸಂಬಂಧಪಟ್ಟ ದೇವರು ಇರುತ್ತಾನೆಯೇ ಹೊರತು; ಪೂಜಾರಿಗಳಾಗಲೀ, ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಸರ್ಕಾರಿ ಅಧಿಕಾರಿಗಳಲ್ಲ ಎಂದು ಹೇಳಿದೆ.

ಮಾಲಿಕನ ಜಾಗದಲ್ಲಿ ಪೂಜಾರಿಗಳಾಗಲೀ, ಸರ್ಕಾರಿ ಅಧಿಕಾರಿಗಳಾಗಲೀ ನಿಲ್ಲುವಂತಿಲ್ಲ. ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ದೇವರ ಪರವಾಗಿ ಪೂಜಾರಿಗಳು ಅಥವಾ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ತಾವೇ ಅದರ ಹಕ್ಕುದಾರರು ಎನ್ನುವಂತಿಲ್ಲ ಎಂದು ಸರ್ವೋಚ್ಚ ಪೀಠ ಖಚಿತಪಡಿಸಿದೆ. ಇದೇ ವೇಳೆ ಈ ನಿಯಮ ಖಾಸಗಿ ದೇವಸ್ಥಾನಗಳಿಗೆ ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಮಧ್ಯಪ್ರದೇಶ ಸರ್ಕಾರ ಇತ್ತೀಚೆಗೆ ಎರಡು ಸುತ್ತೋಲೆಗಳನ್ನು ಹೊರಡಿಸಿ, ಮಾಲಿಕರ ಜಾಗದಲ್ಲಿ ಪೂಜಾರಿಗಳ ಹೆಸರು ಇರಬಾರದು. ಹಾಗಿದ್ದರೆ ಅನಧಿಕೃತವಾಗಿ ಪೂಜಾರಿಗಳು ಮಾರುವ ಅಪಾಯವಿದೆ ಎಂದು ಆದೇಶಿಸಿತ್ತು. ಇದನ್ನು ಪೂಜಾರಿಗಳು ವಿರೋಧಿಸಿದ್ದರು. ಅದರ ಪರವಾಗಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವೀಗ ವಜಾ ಮಾಡಿದೆ. ಅಲ್ಲದೇ ಈ ತೀರ್ಪಿಗೆ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮಜನ್ಮಭೂಮಿಯ ಮಾಲಿಕತ್ವವನ್ನು ಉದಾಹರಣೆಯಾಗಿ ನೀಡಿ ಸಮರ್ಥಿಸಿಕೊಂಡಿದೆ.