
ವಿಶೇಷ ವರದಿ
ಬೆಂಗಳೂರು : 1978 ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.
ಸಮಾಜವಾದ ತತ್ವ, ಸಿದ್ಧಾಂತಗಳ ಮೇಲೆ ಒಲವು, ರಾಮ್ ಮನೋಹರ್ ಲೋಹಿಯಾ ಅವರ ತತ್ವಗಳಿಂದ ಪ್ರಭಾವ, ಶಾಲಾ ದಿನಗಳಿಂದಲೇ ಉತ್ತಮ ವಾಗ್ಮಿಯಾಗಿದ್ದವರು ಸಿದ್ದರಾಮಯ್ಯ.
ಗಂಭೀರ ಸ್ವಭಾವದವರಾಗಿದ್ದ ಸಿದ್ದರಾಮಯ್ಯನವರು, ಜಾನಪದ ನೃತ್ಯ, ನಾಟಿ ಕೋಳಿ ಸಾಂಬಾರ್ ಎಂದರೆ ತುಂಬಾ ಇಷ್ಟಪಡುತ್ತಿದ್ದರು. ಸಿದ್ದರಾಮಯ್ಯನವರ ಬಾಲ್ಯದ ಜೀವನ ತುಂಬಾ ರೋಚಕ.

ಸಿದ್ದರಾಮಯ್ಯ ಅವರು ಮಾಧ್ಯಮವೊಂದರಲ್ಲಿ ಹೇಳಿಕೊಂಡಂತೆ, ಒಂದರಿಂದ ನಾಲ್ಕನೇ ತರಗತಿ ಓದಲೇ ಇಲ್ಲ. ನೇರವಾಗಿ 5 ನೇ ತರಗತಿಗೆ ದಾಖಲಾಗಿದ್ದರು. ಸಿದ್ದರಾಮಯ್ಯ ಅವರು ಬಾಲ್ಯದಲ್ಲಿ ಶಾಲೆಗೆ ಹೋಗಿಲ್ಲ. ಸಿದ್ದರಾಮಯ್ಯ ಅವರ ತಂದೆ, ಅವರನ್ನು ವೀರ ಮಕ್ಕಳು ಕುಣಿತ ಕಲಿಯಲು ಸೇರಿಸಿದ್ದರು. ಕುಣಿತ ಕಲಿಸುವ ನಂಜೇಗೌಡರು ಎಂಬ ಮೇಷ್ಟ್ರು, ಮಣ್ಣಿನ ಮೇಲೆ ಅಕ್ಷರ ಅಭ್ಯಾಸ ಕಲಿಸಿದ್ದರು. 2 ವರ್ಷದ ನಂತರ ನಂಜೇಗೌಡರು ಕುಣಿತ ಕಲಿಸುವುದು ನಿಲ್ಲಿಸಿದರು. ಆಮೇಲೆ ಒಂದೆರೆಡು ವರ್ಷ ಹುಡುಗರ ಜೊತೆಯಲ್ಲಿ ಎಮ್ಮೆ ಮೇಯಿಸುವುದಕ್ಕೆ ಹೋಗಿದ್ದರು. ನಂತರ ರಾಜಪ್ಪ ಎಂಬ ಹೆಡ್ ಮಾಸ್ಟರ್ ಸಿದ್ದರಾಮಯ್ಯ ಅವರನ್ನು ಶಾಲೆಗೆ ಸೇರಿಸಿದ್ದರಂತೆ. ಸಿದ್ದರಾಮಯ್ಯ ಅವರ ಅಕ್ಷರ ಜ್ಞಾನವನ್ನು ಗಮನಿಸಿದ ಮೇಷ್ಟ್ರು, ನೇರವಾಗಿ ಐದನೇ ಕ್ಲಾಸ್ಗೆ ದಾಖಲಿಸಿದರಂತೆ.

ಸಿದ್ದರಾಮಯ್ಯ ಅವರು ಓದುವುದರಲ್ಲಿ ಸದಾ ಮುಂದಿದ್ದರು. ಯಾವುದೇ ತರಗತಿಯನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಇನ್ನು ಆಟದಲ್ಲೂ ಹೆಚ್ಚು ಆಸಕ್ತಿ ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸುತ್ತಿದ್ದರು. ಹಾಕಿ, ಕ್ರಿಕೆಟ್, ಕಬಡ್ಡಿ ಹೀಗೆ ಶಾಲಾ ದಿನಗಳಲ್ಲಿ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದರು. ಎರಡನೇ ವರ್ಷದ ಎಲ್.ಎಲ್.ಬಿ. ಓದುವಾಗ ಪರೀಕ್ಷೆ ಸಮಯದಲ್ಲಿ ಒಂದು ಘಟನೆ ನಡೆದಿತ್ತು. ಎಲ್.ಎಲ್.ಬಿ. ಓದುವಾಗ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು ಎಂದು ನಂಬಿ ಮೋಸ ಹೋಗಿದ್ದರಂತೆ.
1970ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರಂತೆ ಜನಪ್ರಿಯತೆ, ಇಮೇಜ್ ಬೆಳೆಸಿಕೊಂಡ ಮತ್ತೊಬ್ಬ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ. ಕರ್ನಾಟಕದ ಎರಡು ಜನಪ್ರಿಯ, ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರ ಎದುರು ರಾಜಕೀಯ ಪ್ರಭಾವ ಮೆರೆದ ಹಿಂದುಳಿದ ವರ್ಗದ ನಾಯಕರೆಂದರೆ ಸಿದ್ದರಾಮಯ್ಯ ಎಂದರೆ ತಪ್ಪಾಗಲಾರದು.
ನಾಟಿ ಕೋಳಿ ಸಾರು ಇಷ್ಟ: ಸಿದ್ದರಾಮಯ್ಯ ಅವರಿಗೆ ನಾಟಿ ಕೋಳಿ ಸಾರು ಹೆಚ್ಚು ಇಷ್ಟ. ಅನಾರೋಗ್ಯ ಇದ್ದಾಗಲೂ ಆಸ್ಪತ್ರೆಯಲ್ಲಿ ಇದ್ದರೂ ನಾಟಿ ಕೋಳಿ ಸಾರು ತಿಂದು ಸುದ್ದಿಯಾಗಿದ್ದರು.