Headlines

3 ವರ್ಷದಲ್ಲಿ ರಾಮಮಂದಿರ ನಿರ್ಮಾಣಕ್ಕೆ ₹900 ಕೋಟಿ ಖರ್ಚು: ಖಾತೆಯಲ್ಲಿ ₹3,000 ಕೋಟಿ ಬಾಕಿ

Spread the love

ಅಯೋಧ್ಯೆ (ಉತ್ತರ ಪ್ರದೇಶ) : ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಫೆಬ್ರವರಿ 5, 2020 ರಿಂದ ಮಾರ್ಚ್ 31, 2023 ರವರೆಗೆ ರಾಮಮಂದಿರ ದೇವಾಲಯ ನಿರ್ಮಾಣಕ್ಕೆ 900 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ಬ್ಯಾಂಕ್ ಖಾತೆಗಳಲ್ಲಿ ಇನ್ನೂ 3000 ಕೋಟಿ ರೂಪಾಯಿ ಬಾಕಿ ಇದ್ದು, ದಿನನಿತ್ಯ ಬರುತ್ತಿರುವ ದೇಣಿಗೆಯಿಂದ ವೆಚ್ಚ ಭರಿಸಲಾಗುತ್ತಿದೆ ಎಂದು ಟ್ರಸ್ಟ್ ಅಧಿಕಾರಿಗಳು ಮಾಹಿತಿ ನೀಡಿದರು.

ಶನಿವಾರ ಬೆಳಗ್ಗೆ ನಡೆದ ಮೂರು ಗಂಟೆಗಳ ಅಧಿಕಾರಿಗಳ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ, “ದೇವಾಲಯ ನಿರ್ಮಾಣಕ್ಕೆ ಫೆಬ್ರವರಿ 5, 2020 ರಿಂದ ಮಾರ್ಚ್ 31, 2023 ರವರೆಗೆ 900 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ, ಹಾಗೆಯೇ 3000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಇನ್ನೂ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಲ್ಲಿ ಬಾಕಿಯಿದೆ. ವಿದೇಶಿ ಕರೆನ್ಸಿಯಲ್ಲಿ ದೇಣಿಗೆ ಸ್ವೀಕರಿಸುವ ಕಾನೂನು ಪ್ರಕ್ರಿಯೆ ಸೇರಿದಂತೆ 18 ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಟ್ರಸ್ಟ್ ಎಫ್‌ಸಿಆರ್‌ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ” ಎಂದು ಹೇಳಿದರು.

ಸರಯೂ ನದಿಯ ದಡದಲ್ಲಿರುವ ರಾಮ್ ಕಥಾ ಮ್ಯೂಸಿಯಂ ಕಾನೂನು ಟ್ರಸ್ಟ್ ಆಗಿದ್ದು, ರಾಮಮಂದಿರದ 500 ವರ್ಷಗಳ ಇತಿಹಾಸ ಮತ್ತು 50 ವರ್ಷಗಳ ಕಾನೂನು ದಾಖಲೆಗಳನ್ನು ಅಲ್ಲಿ ಇರಿಸಲಾಗುವುದು. ಜನವರಿ 22 ರಂದು ನಡೆಯಲಿರುವ ಶಂಕುಸ್ಥಾಪನೆ (ಪ್ರಾಣ ಪ್ರತಿಷ್ಠಾ) ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಸುಮಾರು 10,000 ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರತಿಷ್ಠಾಪನೆಯ ದಿನದಂದು ಸೂರ್ಯಾಸ್ತದ ನಂತರ ದೇಶಾದ್ಯಂತ ನಾಗರಿಕರು ತಮ್ಮ ಮನೆಗಳ ಮುಂದೆ ದೀಪಗಳನ್ನು ಬೆಳಗಿಸುವಂತೆ ದೇವಾಲಯದ ಟ್ರಸ್ಟ್ ಮನವಿ ಮಾಡಿದೆ ಎಂದು ತಿಳಿಸಿದರು.

ಇನ್ನು ಮಹಾಮಸ್ತಕಾಭಿಷೇಕಕ್ಕೂ ಮೊದಲು ಭಗವಾನ್ ರಾಮನ ಮುಂದೆ ಅಕ್ಕಿಯನ್ನು ಪೂಜಿಸಿ ನಂತರ ಅದನ್ನು ದೇಶಾದ್ಯಂತ ವಿತರಿಸಲಾಗುವುದು. ಜನವರಿ 1 ರಿಂದ 15 ರವರೆಗೆ ಐದು ಲಕ್ಷ ಹಳ್ಳಿಗಳಲ್ಲಿ ಅಕ್ಕಿ (ಪೂಜಿಸಿದ ಅಕ್ಷತೆ) ವಿತರಿಸಲಾಗುವುದು. ಈಗಾಗಲೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸಮಿತಿ ರಚಿಸಲಾಗಿದ್ದು, 2025ರ ಜನವರಿ ವೇಳೆಗೆ ಮೂರು ಹಂತಗಳಲ್ಲಿ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.