ಚೆನ್ನಗಿರಿ ಪೊಲೀಸ ಠಾಣೆ ಧ್ವಂಸ ಪ್ರಕರಣ ; ರಾಜ್ಯ ಸರಕಾರದ ಆಡಳಿತದಲ್ಲಿ ಕಾನೂನು ವ್ಯವಸ್ಥೆ ಇದೆಯೇ?: ಕಾಗೇರಿ ಪ್ರಶ್ನೆ

Spread the love

ಶಿರಸಿ : ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ಎಲ್ಲೆಡೆ ಜನಾಕ್ರೋಶದ ನಡುವೆಯೇ ಚೆನ್ನಗಿರಿ ಪೊಲೀಸ್ ಠಾಣೆ  ದ್ವಂಸ ಪ್ರಕರಣ ಆಡಳಿತದಲ್ಲಿ ಕಾನೂನು ವ್ಯವಸ್ಥೆ ಇದೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಸಾರ್ವಜನಿಕರನ್ನು ರಕ್ಷಣೆ ಮಾಡುವ ಪೊಲೀಸ್ ಠಾಣೆಗೆ ರಕ್ಷಣೆ ಕೊಡಬೇಕಾಗಿ ಬಂದ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಚುನಾಯಿತ ಸರಕಾರ ಇದೆಯೇ ಎಂದು ಪ್ರಶ್ನಿಸುವಂತಾಗಿದೆ.  ಈ ಹಿಂದೆಯೂ ಕಾಂಗ್ರೆಸ್ ಸರಕಾರವಿದ್ದಾಗ ಕೆ ಜೆ ಹಳ್ಳಿ, ಡಿ ಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಸ್ಥಳಗಳಲ್ಲಿ ಠಾಣೆ ದ್ವಂಸ ಸಾರ್ವಜನಿಕ ಆಸ್ತಿ ಹಾನಿ ಮಾಡುವಾಗಲೂ ಅಧಿಕಾರಿಗಳ ವಿರುದ್ದ ಕ್ರಮಕೈಕೊಂಡರೆ ವಿನಹ ತಪ್ಪಿತಸ್ತರನ್ನು ಶಿಕ್ಷಿಸಲಿಲ್ಲ. ಈಗಲೂ ಸಹ ಚೆನ್ನಗಿರಿಯಲ್ಲಿ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ ರಾಜ್ಯ ಪೊಲೀಸ್ ಇಲಾಖೆಯ ನೈತಿಕ ಶಕ್ತಿಯನ್ನು ಉಡುಗಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯಾರೇ ಕಾನೂನು ಉಲ್ಲಂಘಿಸಿದರೂ ಅವರ ಮೇಲೆ ಕಠಿಣಕ್ರಮ ಕೈಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಪರಾಧಿಗಳನ್ನು ರಕ್ಷಣೆಮಾಡುತ್ತಿರುವ ಸರಕಾರ ಅಧಿಕಾರಿಗಳಿಗೆ ಬಿಗಿ ಕ್ರಮ ಜರುಗಿಸಲು ಬಿಡುತ್ತಿಲ್ಲ. ಅಲ್ಲದೆ ಗೃಹಸಚಿವ ಪರಮೇಶ್ವರ್ ಅವರಿಗೆ ಕೆಟ್ಟ ಹೆಸರು ತರುವ ಹುನ್ನಾರವೂ ಇರಬಹುದೇನೋ…
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವುಮಾಡಿಕೊಟ್ಟು ಕಾನೂನು ವ್ಯವಸ್ಥೆ ಕಾಪಾಡಲು ಮಾಜಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ.