ಹಾಲಿ, ಮಾಜಿ ಶಾಸಕರನ್ನು ಟೈಮ್ ಬಂದಾಗ ವಿದೇಶಕ್ಕೆ ಕರೆದುಕೊಂಡು ಹೋಗೋಣ: ಸತೀಶ್​ ಜಾರಕಿಹೊಳಿ

Spread the love

ಬೆಳಗಾವಿ: “ಟೈಮ್ ಬಂದಾಗ ಮಾಜಿ, ಹಾಲಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣ” ಎಂದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಕೃಷಿ ಇಲಾಖೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಸೇರಿಸಲು ಸರ್ಕಾರ ಮುಂದಾಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲವೆಂದು, 10 ವರ್ಷಗಳ ಹಿಂದೆಯೇ ಈ ಇಲಾಖೆಗಳನ್ನು ಒಟ್ಟಿಗೆ ಸೇರಿಸಬೇಕೆಂದು ವರದಿ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಇಲಾಖೆಗಳನ್ನು ಒಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಕಾಂತರಾಜು ವರದಿ ಸ್ವೀಕರಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆ ಆಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, “ಇನ್ನೂ ನಮಗೆ ವರದಿಯನ್ನೇ ಕೊಟ್ಟಿಲ್ಲ. ವರದಿ ಕೊಡಬೇಕು‌. ಅದರ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ಸುದೀರ್ಘ ಪ್ರಕ್ರಿಯೆ ನಡೆಯುತ್ತದೆ. ಆ ವರದಿ ಬಂದ ಬಳಿಕ ನೋಡೋಣ. ಸಿಎಂ ಮತ್ತು ಡಿಸಿಎಂ ಇದ್ದಾರೆ, ಅವರು ಈ ಕುರಿತು ಚರ್ಚೆ ಮಾಡುತ್ತಾರೆ” ಎಂದು ಹೇಳಿದರು.

ಚಳಿಗಾಲದ ಅಧಿವೇಶನ ಸಿದ್ಧತೆ ಬಗ್ಗೆ ಮಾತನಾಡಿ, “ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಈಗಾಗಲೇ ಎಲ್ಲ ರೀತಿ ಸಿದ್ಧತೆ ಮಾಡಿದ್ದಾರೆ. ಕಳೆದ ಬಾರಿ ಅಧಿವೇಶನ ನಡೆಸಿದ ಅನುಭವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗಿದ್ದು, ಈ ಬಾರಿಯ ಅಧಿವೇಶನವೂ ಏನೂ ತೊಂದರೆ ಆಗದೇ ಸುಗಮವಾಗಿ ನಡೆಯಲಿದೆ” ಎಂದರು. ಸುವರ್ಣ ಸೌಧದ ಬಳಿ ಪ್ರತಿಭಟನೆಗಳು ನಡೆಯುವ ವಿಚಾರವಾಗಿ ಮಾತನಾಡಿ, “ಪ್ರತಿಭಟನೆ ಮಾಡಲು ಬರುವವರನ್ನು ಬರಬೇಡ ಎನ್ನಲು ಬರುವುದಿಲ್ಲ. ಆಯಾ ಇಲಾಖೆ ಸಚಿವರು ಮೊದಲೇ ಅವರ ಅಹವಾಲುಗಳನ್ನು ಸ್ವೀಕರಿಸಿದರೆ ಪ್ರತಿಭಟನೆಗಳು ಸ್ವಲ್ಪ ಕಡಿಮೆ ಆಗಬಹುದು” ಎಂದರು.