ಶಿರಸಿ : ಗಿಡ ,ಮರ , ಬಳ್ಳಿ ,ಪ್ರಾಣಿ ,ಪಕ್ಷಿ , ನದಿ , ಸಮುದ್ರ , ಪರ್ವತ , ಬೆಟ್ಟ , ಗುಡ್ಡಗಳನ್ನು ಆರಾಧಿಸುವ ಭಾರತೀಯ ಆಚಾರ – ವಿಚಾರ ಪ್ರಪ್ರಥಮ ದೈವೀಕರಿಸಿದ ಪ್ರಾಣಿ “ನಾಗ” ಅಥವಾ “ಸರ್ಪ”. ಪರಶುರಾಮ ಸೃಷ್ಟಿ ಎಂದು ನಂಬಲಾಗುವ ಈ ಪಶ್ಚಿಮ ಕರಾವಳಿಯಲ್ಲಂತೂ ನಾಗ ಶ್ರದ್ಧೆ ವಿಶಿಷ್ಟವಾಗಿದೆ.
ನಾಗರ ಪಂಚಮಿಯ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆ ಇದೆ. ನಾಗರ ಬನದಲ್ಲಿ ಪೂಜೆ ಮಾಡಿ ಭಕ್ತಿ ಶ್ರದ್ಧೆ ಅರ್ಪಿಸುವುದು ನಾಗರ ಪಂಚಮಿಯ ದಿನ ಸರ್ವೇ ಸಾಮಾನ್ಯ. ಆದರೇ, ಇಲ್ಲೊಬ್ಬರು ನಿಜ ನಾಗರ ಹಾವಿಗೆ ಪೂಜೆ ಮಾಡಿ ಹಣ್ಣು ಕಾಯಿ ನೈವೇದ್ಯ ಮಾಡಿ ಭಕಿ ಸಮರ್ಪಿಸಿದ್ದಾರೆ.
ಉರಗ ತಜ್ಞ ಪ್ರಶಾಂತ ಹುಲೆಕಲ್ ಹಾಗೂ ಅವರ ಕುಟುಂಬದಿಂದ ನಾಗರ ಹಾವಿಗೇ ಪೂಜೆ ಮಾಡಿ ಭಕ್ತಿ ಭಾವ ಸಮರ್ಪಿಸಿರುವುದು ವಿಶೇಷ.
ಕಳೆದ ಮೂರು ದಶಕಗಳಿಂದ ನಾಡಿಗೆ ಬಂದ ವಿಷಕಾರಿ ಹಾವನ್ನೂ ಹಿಡಿದು ಕಾಡಿಗೆ ಬಿಟ್ಟ ತಜ್ಞ ತಂದೆ ಸುರೇಶ ಹುಲೇಕಲ್ ಅಗಲಿಕೆಯ ಬಳಿಕವೂ ಕಳೆದ ನಾಲ್ಕು ವರ್ಷದಿಂದ ನಾಗರ ಪಂಚಮಿ ದಿನದಂದು ಕಾಡಿನಲ್ಲಿ ಹಾವು ಹುಡುಕಿ ಅದಕ್ಕೆ ಪೂಜಿಸುವ ಮೂಲಕ ಜನ ಜಾಗೃತಿ ಮಾಡುತ್ತಿರುವ ಉರಗ ಪ್ರೇಮಿ ಪ್ರಶಾಂತ ಹುಲೆಕಲ್ ಹಾಗೂ ಕುಟುಂಬ ಈ ವರ್ಷದ ನಾಗರ ಪಂಚಮಿಗೂ ಅದೇ ಪದ್ಧತಿಯನ್ನು ಮುಂದುವರಿಸಿದ್ದಾರೆ.